Monday, June 9, 2008

ಬದುಕೆಂಬುದು ನೂರಾರು ರೈಲು ಹರಿದಾಡುವ ಗ್ರೇಟ್ ಜಂಕ್ಷನ್!

ಅಂಕಣಕಾರ : ರವಿ ಬೆಳಗೆರೆ

ನೀವು ಏನೇ ಅನ್ನಿ, ಹುಡುಗಿಯರು ತುಂಬ ಬೇಗ ಎಲ್ಲವನ್ನೂ ಮರೆತು ಬಿಡುತ್ತಾರೆ. ಹುಡುಗರು ಹಾಗಲ್ಲ. ವಿಪರೀತ ಡಿಪ್ರೆಸ್ ಆಗ್ತಾರೆ. ಕುಡಿಯೋದು, ಸೇದೋದು ಎಲ್ಲ ಕಲೀತಾರೆ. ಸಾಮಾನ್ಯವಾಗಿ ಬಿಟ್ಟು ಹೋಗೋದು ಹುಡುಗಿಯರೇ ಆದ್ದರಿಂದ, ಉಳಿದು ಹೋದವರಿಗೆ ಹೆಚ್ಚು ನೋವಾಗುತ್ತದೆ.

ಹಂಗಂತ ಮೊನ್ನೆ ಒಂದು ಚರ್ಚೆ ನಡೆಯುತ್ತಿತ್ತು. ಅದರಲ್ಲಿ ಒಂದು ಮಾತು ಮಾತ್ರ ನಿಜ. ಬಿಟ್ಟು ಹೋಗುವವರು ಹುಡುಗರೇ ಆಗಿರಲಿ, ಹುಡುಗಿಯರೇ ಆಗಿರಲಿ-ಬಿಟ್ಟು ಹೋದವರಲ್ಲಿ ನೋವು ಹೆಚ್ಚು ದಿನ ಉಳಿಯುವುದಿಲ್ಲ. ಉಳಿದು ಹೋದವರನ್ನು ನೆನಪುಗಳು ಬೆಂಬಿಡದೆ ಕಾಡುತ್ತವೆ. ಅದಕ್ಕೆ sense of rejection ಮುಖ್ಯ ಕಾರಣ ಅನ್ನೋದು ನನ್ನ ವಾದ. ಅಯ್ಯೋ ಅವಳನ್ನು ಕಳಕೊಂಡೆನಲ್ಲಾ? ಅವಳು ದಕ್ಕದೆ ಹೋದಳಲ್ಲಾ ಅಂತ ಒಂದು ಬಾಧೆ ಇದ್ದೇ ಇರುತ್ತದೆ. ಅದಕ್ಕೆ ಜೊತೆಯಾಗೋದು, ಅವರನ್ನು miss ಮಾಡಿಕೊಳ್ಳುವ ಪರಿ. ಪ್ರತೀ ಸಾಯಂಕಾಲ ಸೇರುತ್ತಿದ್ದವರಿಗೆ ಸಾಯಂಕಾಲವಾದ ಕೂಡಲೆ ಏನು ಮಾಡಬೇಕೆಂಬುದೇ ತೋಚುವುದಿಲ್ಲ. ಭಾನುವಾರಗಳೆಲ್ಲ ಖಾಲಿ ಖಾಲಿ. ಏನು ಮಾಡುವುದಕ್ಕೂ ಮೂಡ್ ಇರುವುದಿಲ್ಲ. ಕ್ಷಣಕ್ಷಣಕ್ಕೂ ಅವರನ್ನು miss ಮಾಡಿಕೊಳ್ಳುತ್ತೇವೆ. ಸಾಮಾನ್ಯವಾಗಿ ಹುಡುಗರು ಕುಡಿಯಲಾರಂಭಿಸುವುದು, ತೀರ ಕುಡುಕರೇ ಆಗಿ ಹೋಗುವುದು ಇದೇ ಕಾರಣಕ್ಕೆ.

ಆದರೆ ನನಗನಿಸುವ ಮಟ್ಟಿಗೆ ಹುಡುಗಿಯರು ತಮ್ಮ ಫೋಕಸ್ ಶಿಫ್ಟ್ ಮಾಡಿಕೊಳ್ಳುತ್ತಾರೆ. ಅವರಿಗೂ ಉಳಿದು ಹೋದೆನೆಂಬ ವೇದನೆಯಿರುತ್ತದೆ. ತಿರಸ್ಕೃತರಾದೆವೆಂಬ ಭಾವ ಅವರನ್ನೂ ಕಾಡುತ್ತದೆ. ಆದರೆ ಗಂಡಸಿನಿಂದ ವಂಚನೆಗೊಳಗಾದ ಹುಡುಗಿಯೊಬ್ಬಳು ಉಳಿದವರು ಅಂದುಕೊಂಡದ್ದಕ್ಕಿಂತ ಅಥವಾ ತಾನೇ ಅಂದುಕೊಂಡದ್ದಕ್ಕಿಂತ ಬೇಗನೆ recover ಆಗುತ್ತಾಳೆ.

"ಆಗದೆ ಬೇರೆ ಗತ್ಯಂತರವೇ ಇರಲಿಲ್ಲ ರವೀ ಸರ್. ಅವನ ಜೊತೆ ಎರಡು ವರ್ಷ ಇದ್ದೆ. ಅನ್ನೋದಕ್ಕಿಂತ, ಎರಡು ವರ್ಷ ಅವನನ್ನ ಕಟ್ಟಿಕೊಂಡು ಹೆಣಗಿದೆ, ಏಗಿದೆ ಅನ್ನೋದೇ ಸೂಕ್ತ. ತುಂಬ ಕೆಟ್ಟವನು ಅಂತ ಅಲ್ಲ. ಆದರೆ ಅವನಲ್ಲಿ ನನಗೆ ಇಷ್ಟವಾಗದೆ ಇರುವಂಥ ಗುಣಗಳು ತುಂಬ ಇದ್ದವು. ಪ್ರೀತಿ ಅನ್ನೋದು ಅದೆಲ್ಲವನ್ನೂ ಮುಚ್ಚಿ ಹಾಕಿತ್ತು. ಆದರೆ ಕೊನೇಲಿ ಅವನು ನನ್ನ ಕೈತಪ್ಪಿ ಹೋದೋದು ಗ್ಯಾರಂಟಿ ಅಂತ ಆದಾಗ, ಕಳ್ಕೊಳ್ಳದೆ ಬೇರೆ ಗತ್ಯಂತರವಿಲ್ಲ ಅಂತ ಆದಾಗ, ಫೈನ್... ಇಲ್ಲಿಗೆ ಇದು ಮುಗೀತು. ಇವನಿನ್ನು ಹೊರಟು ಹೋಗಲಿ, ಒತ್ತಾಯದಿಂದ ಹಕ್ಕು ಸಾಧಿಸೋದರಲ್ಲಿ ಅರ್ಥವಿಲ್ಲ ಅಂತ ತೀರ್ಮಾನಿಸಿ ಅವನಿಂದ ಕಳಚಿಕೊಂಡು ಬಿಟ್ಟೆ. ನೋವಾಗಿದ್ದು ನಿಜ. ಇಲ್ಲ ಅನ್ನಲ್ಲ. ಆದರೆ ನೋವು ಪಡೋಕೂ ಒಂದು ಹಂತದಲ್ಲಿ ಆ ಮನುಷ್ಯ worth ಅಲ್ಲ ಅನ್ನಿಸಿದಾಗ ಕಣ್ಣೀರು ನಿಂತು ಹೋಗುತ್ತಲ್ವಾ ರವೀ ಸರ್?"

ಹಾಗಂತ ಹುಡುಗಿಯೊಬ್ಬಳು ಮಾತನಾಡಿದುದು ನನಗೆ ಮೊನ್ನೆ ನೆನಪಾಯಿತು. ಬಲಹೀನತೆ, ಕೈಲಾಗದತನ, ಹ್ಯಾಪತನ, ಬಾಯಿ ವಾಸನೆ-ಎಲ್ಲವನ್ನೂ ಸಹಿಸಿಕೊಂಡು ನೀನೆ ಸರ್ವಸ್ವ ಅಂತ ಪ್ರೀತಿಸಿದಾಗ ಅದನ್ನೂ ಬಿಟ್ಟು ಒಬ್ಬ ಮನುಷ್ಯ ಹೊರಟು ಹೋಗುತ್ತಾನೆ ಅಂತಾದರೆ, ಅವನು ಬೇರೆ ವಿಷಯದಲ್ಲಿ ಇನ್ನೆಂಥವನೇ ಇರಲಿ, ಎಷ್ಟೇ ಶ್ರೀಮಂತನಾಗಿರಲಿ, ಸ್ಫುರದ್ರೂಪಿಯಾಗಿರಲಿ-not worth ಅನ್ನಿಸಿಬಿಡುತ್ತಾನೆ. ಅವನ್ನು ಕಳೆದುಕೊಳ್ಳುವುದಕ್ಕೆ ಮನಸ್ಸು ಸಿದ್ಧವಾಗಿ ಬಿಡುತ್ತದೆ. ಹಾಗಾದಾಗಲೇ ಹುಡುಗಿಯರು ತಮ್ಮ focus shift ಮಾಡಿಕೊಳ್ಳುತ್ತಾರೆ. ಆ ಜಾಗಕ್ಕೆ ಬೇರೆ ಗಂಡಸೇ ಬರಬೇಕು ಅಂತಿಲ್ಲ. ಬೇರೆ ಹಾಬಿ ಬರಬಹುದು. ಬೇರೆ ನೌಕರಿ ಬರಬಹುದು. ಇವತ್ತಿನ ದಿನಮಾನದಲ್ಲಿ ಕೊಂಚ ಮಟ್ಟಿಗೆ ಓದಿದ ಹೆಣ್ಣು ಮಕ್ಕಳಿಗೂ ಬದುಕಲು ಸಾಕಾಗುವಷ್ಟು ಸಂಬಳದ ನೌಕರಿಗಳು ಸಿಗುತ್ತವೆ. ಇವತ್ತು ಹೀಗಾದರೂ, ನಾಳೆ ಒಳ್ಳೆಯದಾಗುತ್ತೆ ಬಿಡು ಅಂತ ಧೈರ್ಯ ತಂದು ಕೊಳ್ಳುತ್ತಾರೆ. ಅದಕ್ಕಿಂತ ಹೆಚ್ಚಾಗಿ ಮೂಲತಃ ಹೆಂಗಸಿನಲ್ಲಿ ಒಂದು ಆಕರ್ಷಣೆ, ಆಕರ್ಷಿಸುವ ನಿಸರ್ಗ ಸಹಜ ಚೈತನ್ಯ ಇರುತ್ತದಾದ್ದರಿಂದ ಇನ್ನೊಬ್ಬ ವ್ಯಕ್ತಿ ಸಿಗುತ್ತಾನೆ ಬಿಡು ಎಂಬ ಭರವಸೆ ಅವರಲ್ಲಿ ಗಂಡಸಿಗಿಂತ ಜಾಸ್ತಿ ಇರುತ್ತದೆ.

ವಂಚನೆ ಒಳಗಾದ ಗಂಡಸು ಇದ್ದಕ್ಕಿದ್ದಂತೆ ಗಲಿಬಿಲಿಗೊಳಗಾಗುತ್ತಾನೆ. ಸೇಡು ತೀರಿಸಿಕೊಳ್ಳುತ್ತೇನೆನ್ನುತ್ತಾನೆ. ಕುಡಿದು ಕೂಗಾಡುತ್ತಾನೆ. ಅಳುತ್ತಾನೆ. ತನ್ನ ಸಂಕಟವನ್ನೆಲ್ಲ ಯಾರಿಗೋ ಹೇಳಿಕೊಳ್ಳಬಯಸುತ್ತಾನೆ. ಅವನ ವ್ಯಕ್ತಿತ್ವವೇ ಒಂಥರಾ ಓರಣಗೆಟ್ಟು ಹೋಗುತ್ತದೆ. ಆದರೆ ಹುಡುಗಿಯರಲ್ಲಿ ಹೀಗಾಗುವುದು ಕಡಿಮೆ. ಮೋಸವಾಯಿತು ಅಂತ ಗೊತ್ತಾದ ಕೂಡಲೆ, ಅದು ಬಹಳ ಜನಕ್ಕೆ ತಿಳಿಯದಿರಲಿ ಎಂಬ ಜಾಗರೂಕತೆ ತೆಗೆದುಕೊಳ್ಳುತ್ತಾರೆ. ಹೊರಗಿನದಷ್ಟೇ ಅಲ್ಲ, ಒಳಗಿನಿಂದಲೂ ತಮ್ಮ ವ್ಯಕ್ತಿತ್ವದ ಸವರಣೆ ಮಾಡಿಕೊಳ್ಳುತ್ತಾರೆ. Bold ಆಗುತ್ತಾರೆ. ಎಲ್ಲೋ ಕೆಲವು ಪೆದ್ದು ಹುಡುಗಿಯರು ಕೂಡಲೆ ಇನ್ನೊಂದು affair ಇಟ್ಟುಕೊಳ್ಳುತ್ತಾರೆ ಅನ್ನೋದು ಬಿಟ್ಟರೆ, ವಂಚನೆಗೆ ಒಳಗಾದ ಹುಡುಗಿಯರು ಆದಷ್ಟೂ ಸ್ವತಂತ್ರರಾಗಲು ಪ್ರಯತ್ನಿಸುತ್ತಾರೆ.

ನನ್ನ ದೃಷ್ಟಿಯಲ್ಲಿ ಆಶಾವಾದ ಅಂದರೆ, ಕೇವಲ 'ಒಳ್ಳೆಯದಾಗುತ್ತೆ ಬಿಡು' ಅಂತ ಆಸೆಯಿಟ್ಟುಕೊಳ್ಳುವುದಲ್ಲ. ಆಶಾವಾದವೆಂದರೆ, ಒಳ್ಳೆಯದಾಗಿಸಿಕೊಳ್ಳುವುದಕ್ಕೆ ನಮ್ಮನ್ನು ನಾವು ಅಣಿಗೊಳಿಸಿಕೊಳ್ಳುವುದು. ಮೊದಲಿಗಿಂತ ಹೆಚ್ಚು ಜಾಗರೂಕರಾಗುವುದು. ಪಸಿಗೆ ಬೀಳದಂತೆ ಎಚ್ಚರವಹಿಸುವುದು. ಇವತ್ತಿಗಿಂತ ನಮ್ಮ ವ್ಯಕ್ತಿತ್ವವನ್ನು ಚೆಂದಗೊಳಿಸಿಕೊಳ್ಳುವುದು.

ಅಂತಿಮವಾಗಿ ಈ ಬದುಕು ಅನ್ನೋದೊಂದು ರೇಲ್ವೆ ಜಂಕ್ಷನ್‌ನಂಥದು. ಇದು ಒಂದೇ ರೈಲು ಬಂದು ಹೋಗುವ ಒಂಟಿಗಣ್ಣಿನ ಪುಟ್ಟ ರೈಲ್ವೆ ಸ್ಟೇಷನ್ ಅಲ್ಲ. ನೂರಾರು ರೈಲು ಹರಿದಾಡುವ ಮಹಾನ್ ಟರ್ಮಿನಲ್. ಒಂದು ರೈಲು ತಪ್ಪಿ ಹೋಯಿತೆಂದು ಯಾಕೆ ಅಳುತ್ತ ಕೂಡಬೇಕು? ಎಷ್ಟು ಹೊತ್ತು ಅಂತ ಅದೇ ಸಿಮೆಂಟು ಕಟ್ಟೆಯ ಮೇಲೆ ಅಳುತ್ತಾ ಕೂಡೋದು? Let's move. ಇನ್ನೊಂದು ರೈಲು ಅಗೋ ಅಲ್ಲಿ ಬರುತ್ತಿದೆ.

ಒಮ್ಮೆ ಹಾಗಂತ focus shift ಮಾಡಿಕೊಂಡು ಬಿಟ್ಟರೆ ಬದುಕು ಎಷ್ಟು ಚೆಂದ! ಮರೆವು ಎಷ್ಟು ಸುಲಭ!

(ಸ್ನೇಹಸೇತು : ಹಾಯ್ ಬೆಂಗಳೂರ್)